ತುಂಬಾ ಬೋರ್ ಅದಾಗ ಏನಾದರು ಬರೀಬೇಕು ಅನ್ಸುತ್ತೆ , ಏನೇನೋ ವಿಷಯಗಳು ನೆನಪಿಗೆ ಬರುತ್ತೆ . ಹೀಗೆ ಮನದಲ್ಲಿ ಮೂಡಿದ ಭಾವನೆಗಳ ಬೆನ್ನು ಹಿಡಿದು ಹೊರಟರೆ ಒಂದರ ಹಿಂದೆ ಒಂದರಂತೆ ಅದರ ಕೊಂಡಿ ಬೆಳೆದು ದೊಡ್ಡ ಸರಪಳಿಯೇ ಆಗುತ್ತದೆ . ಆದರೆ ಈ ಆಲಸ್ಯ ಇದಿಯಲ್ಲ !!! ಇದು ಈ ಸರಪಳಿಯನ್ನು ಬೆಳೆಯೋದಕ್ಕೇ ಬಿಡ್ತಾ ಇಲ್ಲ ... ತುಂಬಾ ಸಲ ಸುಮ್ನೆ ಕೂತ್ಕೊಂಡಾಗೆಲ್ಲ ಮನಸಲ್ಲಿ ತುಂಬಾ ಚಿಂತನೆಗಳು ಮೂಡುತ್ತೆ ಆದರೆ ಅದನ್ನು ಒಂದು ಕಡೆ ದಾಖಲಿಸೋಣ ಅಂದ್ರೆ ಈ ದರಿದ್ರ ಸೋಮಾರಿತನ ಇದಿಯಲ್ಲ ಇದು ನನ್ನ ಲೇಖನಿಗೆ ಅವಕಾಶನೇ ಕೊಡ್ತಾ ಇಲ್ಲ . ಆದ್ರೂ ಇವತ್ತು ತುಂಬಾ ಕಷ್ಟ ಪಟ್ಟು ನನ್ನ ಲೇಖನಿನ ಹೊರಗೆ ತೆಗೆದು ಪೇಪರ್ ಮೇಲೆ ಇಟ್ಟಿದೀನಿ .ನೋಡೋಣ ಎಲ್ಲಿವರೆಗೆ ಇದು ಆಲಸ್ಯದ ಜೊತೆಗೆ ಹೋರಾಡುತ್ತೆ ಅಂತ ..!!!!!
ನನಗೆ ಈ ಪ್ರೀತಿ , ಸ್ನೇಹ ಇಂತಹ ವಿಷಯಗಳಲ್ಲಿ ತುಂಬಾ ಆಸಕ್ತಿ . ಈ ವಿಷಯಗಳ ಕುರಿತು ಸ್ನೇಹಿತರೊಂದಿಗೆ ಮಾತಾಡ್ತಾ ಇರ್ತೀನಿ , ಇದಕ್ಕೆ ಸಂಭಂದಿಸಿದಂತೆ ಲೇಖನಗಳು , ಕಾದಂಬರಿಗಳು ಹಾಗೂ ಚಲನಚಿತ್ರಗಳನ್ನು ಆಗಾಗ ನೋಡ್ತಾ ಇರ್ತೀನಿ . ತುಂಬಾನೆ ಖುಷಿ ಕೊಡುತ್ತೆ . ಆದರೂ ನನಗೆ ಆಧುನಿಕ ಪ್ರೇಮದಂತೆ , ಆಧುನಿಕ ಸ್ನೇಹದ ಮೇಲೆ ಕೂಡ ಅಸಹ್ಯ ಅನ್ನೋ ಭಾವನೆ ಮೂಡ್ತಾ ಇದೆ . ಯಾವಾಗ ಬೇಕಾದರೂ ಹುಟ್ಟಿಕೊಳ್ಳುತ್ತೆ ಹಾಗೆ ಯಾವಾಗ ಬೇಕಾದರೂ ಸಾಯುತ್ತಿದೆ ....
ಕೆಲವೊಂದು ಕಡೆಗಳಲ್ಲಿ ಪ್ರೀತಿ ಹೇಗೆ ತನ್ನ ಘನತೆ - ಗೌರವವನ್ನು ಕಳೆದು ಕೊಳ್ತಾ ಇದಿಯೋ ಹಾಗೆ ಸ್ನೇಹವೆಂಬ ಪವಿತ್ರ (???) ಸಂಬಂಧವೂ ಸಹ ಹಲವು ಕಡೆಗಳಲ್ಲಿ ತನ್ನ ಪ್ರಭುದ್ದತೆ ಯನ್ನು ವಿನಾಶದ ಅಂಚಿಗೆ ತಳ್ಳುತ್ತಿದೆ . ನಾನು ಹೀಗೆ ಸ್ನೇಹದ ಕುರಿತಾಗಿ ಮಾತನಾಡುತ್ತಿರುವುದಕ್ಕೆ ಹಲವು ಕಾರಣಗಳಿವೆ . ಹತ್ತಿರದಿಂದ ನಾನು ಕಂಡ ಅನೇಕ ಸಂಗತಿಗಳು ,ನನ್ನ ಅನುಭವಕ್ಕೆ ಬಂದ ಕೆಲವೊಂದು ವಿಷಯಗಳು ಹೀಗೆ ಅನೇಕ . ನನ್ನ ಮನಸ್ಸೆಂಬ ಪುಟ್ಟ ಮನೆಯ ಬಾಗಿಲನ್ನು ತಟ್ಟಿ ತಟ್ಟಿ ಎಬ್ಭಿಸಿದ ಹಲವು ಸಂಗತಿಗಳು ,ನೈಜ ಘಟನೆಗಳೇ ಇದಕ್ಕೆ ಮೂಲ ಕಾರಣ.....
ನಾವು ದೊಡ್ದವರಾಗ್ತಾ ಹೋದಹಾಗೆ ನಮ್ಮ ಭಾವನೆಗಳು ,ಜೀವನಶೈಲಿ ,ಚಿಂತನೆ ಹೀಗೆ ಎಲ್ಲವೂ ಬದಲಾಗುತ್ತಾ ಸಾಗುತ್ತದೆ . ನಮ್ಮ ಮನದಲ್ಲಿನ ಅನೇಕ ಭಾವನೆಗಳನ್ನು ಹಂಚಿಕೊಳ್ಳಲು ಅನುಕೂಲವಾಗುವಂತಹ ಒಂದು ಆತ್ಮೀಯವಾದ ಹೃದಯಕ್ಕಾಗಿ ನಮ್ಮ ಮನಸ್ಸು ಪರಿತಪಿಸುತ್ತಿರುತ್ತದೆ . ನನಗೂ ಒಬ್ಬ ಆತ್ಮೀಯ ಗೆಳೆಯ / ಗೆಳತಿ ಬೇಕು ಅಂತ ಪ್ರತಿಯೊಂದು ಮನಸ್ಸಿಗೂ ಅನ್ನಿಸಿರುತ್ತದೆ . ಹೀಗೆ ಆತ್ಮೀಯತೆಯ ಹುಡುಕಾಟದ ಹಾದಿಯಲ್ಲಿ ನಮ್ಮ ಸನಿಹಕ್ಕೆ ಬಂದು , ನಮ್ಮ ಭಾವನೆಗಳಿಗೆ ಸ್ಪಂಧಿಸುವಂತಹ ಮನಸ್ಸಿನೊಂದಿಗೆ ನಮ್ಮ ಅಮೂಲ್ಯವಾದ ಸ್ನೇಹ ಆರಂಭಗೊಳ್ಳುತ್ತದೆ . ನಮಗೆ ಎಲ್ಲರೂ ಗೆಳೆಯ / ಗೆಳತಿಯರಾಗಬಹುದು ಆದರೆ ಎಲ್ಲರನ್ನೂ ಆತ್ಮೀಯರು ( best friend) ಅನ್ನೋದಕ್ಕೆ ಸಾಧ್ಯನೇ ಇಲ್ಲ ...
ಈ ಆತ್ಮೀಯತೆ ಅನ್ನೋದು ಹೇಗೆ ಹುಟ್ಟಿಕೊಳ್ಳುತ್ತದೆಯೋ ಗೊತ್ತಿಲ್ಲ , ಆದರೆ ಬೇರೆ ಬೇರೆ ಮನಸ್ಥಿತಿಯನ್ನೂ ಅರ್ಥೈಸಿಕೊಳ್ಳುವುದು ,ಭಾವನೆಗಳಿಗೆ ಪರಸ್ಪರ ಸ್ಪಂಧಿಸುವ ಪರಿ, ಸುಖ ಕಷ್ಟ ,ದುಃಖ ಧುಮ್ಮಾನ ಗಳನ್ನು ಹಂಚಿಕೊಳ್ಳುವ , ಪರಸ್ಪರ ಸಮಾಧಾನ ಪಡಿಸಿಕೊಳ್ಳುವಂತಹ ಸಂಧರ್ಭಗಳು ಹೀಗೆ ಇವೆ ಮೊದಲಾದ ಸಂಗತಿಗಳು ಆತ್ಮೀಯತೆಗೆ ತಳಹದಿಯಾಗುತ್ತದೆ . ಆತ್ಮೀಯ ಗೆಳೆತನ ಹೀಗೆ ಹಂತ ಹಂತವಾಗಿ ಮುಂದುವರಿಯುತ್ತಾ ಹೋಗುತ್ತದೆ . ಅನೇಕ ಸಂಧರ್ಭ ಗಳಲ್ಲಿ ಕೆಲವು ಸಣ್ಣ ಪುಟ್ಟ ಮುನಿಸುಗಳೂ ಸಹ ಬರಬಹುದು ಆದರೆ ಸ್ನೇಹವೆಂಬ ಪವಿತ್ರವಾದ ಶಕ್ತಿಯ ಮುಂದೆ ಆ ಅನುಮಾನ ,ಮುನಿಸುಗಳು ಹೆಚ್ಚು ದಿನ ಬದುಕಿ ಉಳಿಯಲಾರವು ( ನಿಮ್ಮ ಸ್ನೇಹ ಪವಿತ್ರವಾಗಿದ್ದು ಅಷ್ಟು ಆಳವಾಗಿದ್ದರೆ ಮಾತ್ರ ).
ಆದರೆ ಪ್ರಸ್ತುತ ದಿನಗಳಲ್ಲಿ ಅದೇಕೋ ಗೊತ್ತಿಲ್ಲ ಹಲವು ಕಾರಣಗಳಿಂದ ಅನೇಕ ಸ್ನೇಹ ಸಂಭಂದಗಳು ಆಗಾಗ್ಗೆ ಮುರಿದುಬೀಳುತ್ತಿರುತ್ತವೆ . ಸ್ನೇಹ ಅನ್ನೋದು ಕೇವಲ ಕಥೆ ಕವನ ಗಳಲ್ಲಿ, ಚಲನಚಿತ್ರಗಳಲ್ಲಿ ನೋಡುವುದಕ್ಕಷ್ಟೇ ಸೀಮಿತ ಹೊರತು ದೈನಂದಿನ ಜೇವನದಲ್ಲಿ ಅದರ ಮಹತ್ವ ನಮ್ಮ ಅನುಭವಕ್ಕೆ ಅಷ್ಟೇ ನಿಜ ಎಂಬಂತೆ ಬರುವುದೇ ಇಲ್ಲ . ಸ್ನೇಹ ಸಂಭಂದಗಳು ಏರ್ಪಡುವುದಕ್ಕೆ ಬೇಕಾಗುವಷ್ಟು ಆಸಕ್ತಿ ,ಹೊಂದಾಣಿಕೆಯ ಮನೋಭಾವ ,ತಾಳ್ಮೆ,ಅನುಮಾನಗಳನ್ನು ಮೆಟ್ಟಿ ನಿಲ್ಲುವಂತಹ ಶಕ್ತಿ ನಮ್ಮ ಜೊತೆಯಲ್ಲಿ ಸದಾ ಇರಬೇಕು . ಹೀಗೆ ಇದ್ದಾಗ ಮಾತ್ರ ನಮ್ಮ ಸ್ನೇಹ ಚಿರವಾಗಿರಲು ಸಾಧ್ಯ. ಇಬ್ಬರೂ ಪರಸ್ಪರ ಹೊಂದಿಕೊಂಡು ಎಲ್ಲಾ ವಿಷಯಗಳನ್ನು ಸಮನಾಗಿ ಹಂಚಿಕೊಳ್ಳಬೇಕು . ಪರಸ್ಪರ ನಿರ್ಲಕ್ಷ್ಯ , ತೆಗಳಿಕೆ ,ಅನುಮಾನ ಅನ್ನೋದು ಬರಬಾರದು .ಇಬ್ಬರಲ್ಲಿ ಒಬ್ಬರು ದೂರವಾಗುತ್ತಿದ್ದರೆ ಎಂದರೆ ಇನ್ನೊಬ್ಬರು ಆದಷ್ಟು ಅವರನ್ನು ಕಾಪಾಡಿಕೊಳೋದಕ್ಕೆ ಪ್ರಯತ್ನ ಪಡಬೇಕು ಯಾಕಂದ್ರೆ ನಿಮ್ಮ ಸ್ನೇಹ ಸುಮ್ಮನೆ ಏರ್ಪಟ್ಟಿಲ್ಲ ಅನ್ನೋದು ನೆನಪಿರಲಿ . ಅದರ ಹಿಂದೆ ಹಲವು ಕಾರಣಗಳಿವೆ, ಹಲವು ಏಳು ಬೀಳು ಗಳೂ ಬಂದಿರುತ್ತವೆ. ನಿಮ್ಮ ಸ್ನೇಹ ಅಷ್ಟು ಆಳವಾಗಿದ್ದೂ ಪವಿತ್ರವಾಗಿದ್ದರೆ ಮಾತ್ರ ನಿಮಗೆ ಅದನ್ನು ಏಕೆ ಅಳಿಯದಂತೆ ಉಳಿಸಿಕೊಳ್ಳಬೇಕು ಎಂಬುದರ ಮಹತ್ವ ನಿಮ್ಮ ಅರಿವಿಗೆ ಬಂದಿರುತ್ತದೆ . ಆದರೆ ನನ್ನ ಅನುಭವದ ಪ್ರಕಾರ ಸ್ನೇಹ ಪವಿತ್ರವಾಗಿದ್ದರೆ ( ನಿಜವಾದ ಆತ್ಮೀಯತೆ ಯಾಗಿದ್ದರೆ ) ಪರಸ್ಪರ ಅನುಮಾನ , ತೆಗಳಿಕೆ , ನಿರ್ಲಕ್ಷ್ಯ ಅನ್ನುವಂತಹ ಪ್ರಶ್ನೆಯೇ ಬರುವುದಿಲ್ಲ...
ಇಬ್ಬರ ಚಿಂತನೆಗಳು , ವ್ಯಕ್ತಿತ್ವ ,ನಡೆ ನುಡಿಗಳಲ್ಲಿ ಹಲವು ವ್ಯತ್ಯಾಸಗಳಿರುತ್ತವೆ ಆದರೂ ಸಹ ಆತ್ಮೀಯತೆಯ ಪ್ರಶ್ನೆ ಬಂದಾಗ ಇಬ್ಬರೂ ಒಂದೇ ಎಂಬ ಚಿತ್ರಣ ಕಾಣುತ್ತದೆ . ಗೆಳೆತನಕ್ಕೆ ಯಾವುದೇ ನಿಯಮವಿರುವುದಿಲ್ಲ , ಭೇಧ ಭಾವ ವಿರುವುದಿಲ್ಲ . ಹೆಣ್ಣು ಗಂಡು ,ವಯಸ್ಸು , ಅವರ ನಡುವಿನ ಅಂತರ ಹೀಗೆ ಈ ಮೇಲಿನಂತೆ ಯಾವುದೇ ವಿಷಯಗಳು ಅಡ್ಡ ಬರುವುದಿಲ್ಲ .
ಆದರೆ ಗಂಡು ಹೆಣ್ಣಿನ ವಿಷಯ ಬಂದಾಗ ಮಾತ್ರ ಅವರ ಸ್ನೇಹ ಎಷ್ಟು ಅಮೂಲ್ಯವಾಗಿದ್ದರೂ , ಎಷ್ಟೇ ಪ್ರಾಮಾಣಿಕವಾಗಿದ್ದರೂ ಸಹ ಅವರನ್ನು ನೋಡುವವರ ಧೃಷ್ಟಿ ಮಾತ್ರ ಬೇರೆಯೇ ಆಗಿರುತ್ತದೆ . ಅವರದು ಪವಿತ್ರವಾದ ಸ್ನೇಹವಾಗಿದ್ದರೂ ಕೂಡ ನೋಡುವ ಜನರ ಧೃಷ್ಟಿಯಲ್ಲಿ ಅವರು ಪ್ರೇಮಿಗಳಂತೆಯೇ ಕಾಣುತ್ತಾರೆ , ಅವರ ನಡುವೆ ಇಲ್ಲ ಸಲ್ಲದ ಸಂಭಂದಗಳನ್ನು ಕಲ್ಪಿಸಿಕೊಂಡು ಮಾತನಾಡುವಂತಹ ಜನರಿಗೆ ಕೊರತೆಯೇ ಇರುವುದಿಲ್ಲ ......
" ಅವರಿಬ್ಬರ ನಡುವಿನ ಗೆಳೆತನ ಎಷ್ಟು ಮಧುರವಾಗಿತ್ತೆಂದರೆ , ಆಕೆ ಯಾವುದೇ ಸಂದರ್ಭದಲ್ಲಿ ಎಂತಹದೇ ಸಹಾಯ ಕೇಳಿದರೂ ಆತ ಪ್ರಾಮಾಣಿಕತೆಯಿಂದ ಚಾಚೂ ತಪ್ಪದೆ ಅವಳ ಸಹಾಯಕ್ಕೆ ಮುಂದೆ ಬರಿತ್ತಿದ್ದ . ಅವಳ ಕಷ್ಟ , ದುಃಖ ಜೊತೆಗೆ ಅವಳ ಸುಖ ಸಂತೋಷಗಳಲ್ಲಿಯೂ ಪಾಲುದಾರನಗಿರುತ್ತಿದ್ದ . ರಸ್ತೆ ಬದಿಯಲ್ಲಿ , ಕಾಲೇಜು ಕ್ಯಾಂಪಸ್ ನಲ್ಲಿ ಸಿಕ್ಕರೆ ಜೊತೆಯಲ್ಲೇ ನಿಂತು ಮಾತನಾಡೋದು,ಮೊಬೈಲ್ ಗೆ ರಿಚಾರ್ಜ್ ಮಾಡ್ಸೋದು ,ಎಕ್ಸಾಮ್ ಫೀಸ್ ಕಟ್ಟೋದಕ್ಕೆ ಕೊನೆಯ ದಿನ ಇದ್ದು ಅವಳಿಗೆ ಏನಾದರೂ ತೊಂದರೆಯಾಗಿದ್ದಲ್ಲ್ಲಿ ಅದನ್ನು ಆತನೇ ಭರಿಸುವುದು, ಅವರ ನಡುವೆ ಮೊಬೈಲ್ ನಲ್ಲಿ ನಿರಂತರ ಮೆಸ್ಸೇಜು , ಸಂಭಾಷಣೆ ಹೀಗೆ ಹಲವು ವಿಷಯಗಳು ಸಣ್ಣ ಮನಸ್ಸಿನ ಕೆಲವು ಜನರಲ್ಲಿ ಇವರ ಬಗೆಗೆ ಬೇರೆ ತರನಾದ ಭಾವನೆಗಳು , ಇಲ್ಲದ ಸಂಭಂದಗಳು ಹುಟ್ಟಲು ಕಾರಣವಾಗುತ್ತದೆ . ಹೀಗೆ ಅವಳ ಕೆಲವು ಸಣ್ಣ ಮನಸ್ಸಿನ ಗೆಳತಿಯರ ಇಲ್ಲ ಸಲ್ಲದ ಮಾತುಗಳು, ಅವರೇ ಹುಟ್ಟು ಹಾಕುತ್ತಿದ್ದ ಇಲ್ಲದ ಸಂಭಂದಗಳು , ಅನುಮಾನ ಇದೇ ಹತ್ತು ಹಲವು ಕಾರಣಗಳು ಸೇರಿ ಆಕೆ ಆತನ ಅಮೂಲ್ಯವಾದ ಸ್ನೇಹವನ್ನೇ ದಿಕ್ಕರಿಸಿ , ಪರಸ್ಪರ ಕಣ್ಣೆದುರಿಗೇ ಓಡಾಡಿಕೊಂಡಿದ್ದರೂ ಸಹ ಈಗ ಅವನ್ಯಾರೋ ಅವಳ್ಯಾರೋ ........."
ಹೀಗೆ ಪವಿತ್ರವಾದ ಸ್ನೇಹವೂ ಸಹ ಅನುಮಾನಗಳ ಹುತ್ತ ಬೆಳೆದು ಹೇಳ ಹೆಸರಿಲ್ಲದಂತೆ ಮಾಯವಾಗುತ್ತಿದೆ . ಇಲ್ಲಿ ನಾಶವಾದ ಸ್ನೇಹ ಸಂಭಂದದಲ್ಲಿ ಇಬ್ಬರ ಪಾತ್ರವೂ ಇದೆಯಾ ?? ಅಥವಾ ಆಕೆಯದು ಮಾತ್ರ ತಪ್ಪಾ ?? ಅವನ ತಪ್ಪೇನಾದರೂ ಇದೆಯಾ ?? ಈ ರೀತಿಯ ಹಲವು ಪ್ರಶ್ನೆಗಳು ನಮ್ಮ ಕಣ್ಣೆದುರಿಗೆ ಕಾಣುತ್ತದೆ . ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ ?????
ಅದೇನೇ ಇರಲಿ ನನ್ನ ಅನುಭವದ ಪ್ರಕಾರ ಅವನ ಸ್ನೇಹ ಪವಿತ್ರವಾದದ್ದು ಅನ್ನೋದು ಮಾತ್ರ ಅಷ್ಟೇ ಸತ್ಯ ಆದರೆ ಅವಳ ಅನುಮಾನವೆಂಬ ಹುಚ್ಚು ರೋಗಕ್ಕೆ ಅಮೂಲ್ಯವಾದ ಸ್ನೇಹ ಬಲಿಯಾದದ್ದು ಮರೆಯಲಾಗದಂತಹ ನೋವಿನ ಸಂಗತಿ . ಅದೇನೋ ಗೊತ್ತಿಲ್ಲ ಹಲವು ವಿಷಯಗಳಲ್ಲಿ ಹುಡುಗರಿಗಿಂತ ಹುಡುಗಿಯರನ್ನು ನಂಬೋದೇ ತುಂಬಾ ಕಷ್ಟ . ಮೊನ್ನೆ ನನ್ನ ಬಾಲ್ಯದ ಗೆಳತಿ ಈ ಮೇಲಿನ ವಿಷಯದ ಬಗ್ಗೆ ಮಾತನಾಡುತ್ತಾ ಹೇಳಿದಳು - " ನಾನು ಹುಡುಗಿಯಾಗಿ ಹೇಳ್ತಾ ಇದೀನಿ , ಹುಡುಗರು ಹುಡುಗಿಯರ ಜೊತೆ ಗೆಳೆತನ ಇಟ್ಕೋಬಾರದು , ಅವರಿಂದ ಎಷ್ಟು ಸಹಾಯ ಆಗುತ್ತೋ ಅಷ್ಟನ್ನು ಬಳಸಿಕೊಂಡು ಮತ್ತೆ ಬಿಟ್ ಹಾಕ್ತಾರೆ , ಎಲ್ಲರಿಗೂ ಆತ್ಮೀಯ ಗೆಳೆತನದ ಮಹತ್ವ ಗೊತ್ತಿರೋದಿಲ್ಲ ...." ಹೀಗೆ ಅವಳು ಹೇಳಿದ ಪ್ರತಿಯೊಂದು ಮಾತು ನನಗೆ ತಕ್ಕ ಮಟ್ಟಿಗೆ ಸರಿ ಅನ್ನಿಸಿತು ಏಕೆಂದರೆ ನನ್ನ ಅನುಭವದ ಜೊತೆ ಅವಳ ಮಾತು ಹೊಂದಿಕೆಯಾಗಿತ್ತು ....
ನಮ್ಮ ಸ್ನೇಹ ಅತೀ ಆಳವಾಗಿದ್ದು ಅಮುಲ್ಯವಾಗಿದ್ದರೆ , ಪ್ರೇಮಿಗಳ ಪ್ರೀತಿ ಹಟಾತ್ತನೆ ಮುರಿದು ಬಿದ್ದಾಗ ಅದೆಷ್ಟು ನೋವಾಗುತ್ತದೋ ಅದಕ್ಕಿಂತ ಅತೀ ಹೆಚ್ಚು ನೋವು ಈ ಪವಿತ್ರ ಸ್ನೇಹ ಸಂಭಂದ ಮುರಿದುಬಿದ್ದಾಗ ಅನುಭವಕ್ಕೆ ಬರುತ್ತದೆ . ನಿಮ್ಮ ಸ್ನೇಹ ಪವಿತ್ರವಾಗಿದ್ದು , ನಿಮ್ಮ ತಪ್ಪಿಲ್ಲದೇ, ಮುರಿದು ಬಿದ್ದ ಸ್ನೇಹದ ಮರುಜೀವಕ್ಕಾಗಿ ನಿಮ್ಮ ಮನಸ್ಸು ಪರಿತಪಿಸುತ್ತಿದ್ದು , ನಿಮ್ಮ ಗೆಳೆಯ / ಗೆಳತಿಯಿಂದ ಪುನಃ ಪುನಃ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದು , ಸ್ನೇಹದ ಮರು ಹುಟ್ಟೇ ಕಷ್ಟ ಎನ್ನಿಸಿದರೆ ದಯವಿಟ್ಟು ನಿಮ್ಮ ಪ್ರಯತ್ನವನ್ನು ಅಲ್ಲಿಗೆ ಬಿಟ್ಟು ಬಿಡಿ . ಕೊನೆಯ ಬಾರಿ ನಿಮ್ಮ ಸಂತೋಷಕ್ಕಾಗಿಯಾದರೂ ಮರೆಯಲಾಗದ ಒಂದು ಕಾಣಿಕೆಯನ್ನು ಅವರಿಗೆ ತಲುಪಿಸಿ ಅವರ ಜೀವನದಿಂದ ಹೊರಬಂದುಬಿಡಿ . ಈ ಕಾಣಿಕೆ ಏಕೆಂದರೆ ಅವರಿಗೆ ಜೀವಕ್ಕೆ ಜೀವ ಕೊಡುವಂತಹ ಸ್ನೇಹಕ್ಕಿಂತ ಹೆಚ್ಚು ನಿರ್ಜೀವಿಗಳ ಮೇಲೆಯೇ ನಂಬಿಕೆ ...!!!! ನಮಗೆ ನಮ್ಮಂತಹ ಪವಿತ್ರವಾದ ಹೃದಯವಂತರೇ ಗೆಳೆಯರಾಗಿ , ಆತ್ಮೀಯರಾಗಿ ನಮ್ಮ ಜೀವನದ ಹಾದಿಯಲ್ಲಿ ಮತ್ತೆ ಬರುತ್ತಾರೆ ಎನ್ನುವ ಆತ್ಮ ವಿಶ್ವಾಸದೊಂದಿಗೆ ನಮ್ಮ ಮುಂದಿನ ಸಂತಸದ ದಿನಗಳೆಡೆಗೆ ನಮ್ಮ ಜೀವನದ ಪಯಣ ಸಾಗುತ್ತಿರಬೇಕು ..............................